Sunday, March 1, 2015

ನಿಂಗೊಗೆಂತರ ಅಡುಗೆ ಇಂದು...?! - ಡಿಸೆಂಬರ್ ೨೦೧೨ರ ಹವ್ಯಕ ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ

ನಿಂಗೊಗೆಂತರ ಅಡುಗೆ ಇಂದು...?!

ನಿಂಗೊಗೆ ಇಂದು ತಿಂಡಿಗೆ,ಕಾಫಿಗೆ,ಮಧ್ಯಾನ್ಹದ ಅಡುಗೆ ಎಂತರ ಹೇಳಿ ಹೆಮ್ಮಕ್ಕೊ ಪರಸ್ಪರ ಕೇಳಿಕೊಂಬದು ಒಂದು ಕ್ರಮ. ಉತ್ತರಂಗಳ ಕೇಳುಲೆ ಗಮ್ಮತ್ತಿರುತ್ತು!
"ದಿನಾಗಲೂ ಎಂತರ ಮಾಡುದು ಹೇಳಿ ಆಲೋಚನೆ ಮಾಡುದೇ ಒಂದು ದೊಡ್ಡ ಕೆಲಸ. ಉದಿಯಪ್ಪಗ ಎದ್ದು ಎಂತಾರೂ ಮಾಡುವೊ ಹೇಳಿ ನಿನ್ನೆ ಇರುಳು ರಜ ಅಕ್ಕಿ ಬೊದುಲುಲೆ ಹಾಕಿತ್ತೆ. ಇಂದು ಉದಿಯಪ್ಪಗ ಎದ್ದು ಫ್ರಿಡ್ಜ್ ಬಾಗಿಲು ತೆಗೆದಪ್ಪಗ ಮುಳ್ಳುಸೌತೆಕಾಯಿ ಕೊಳವಲೆ ಶುರುವಾದ ಹಾಂಗೆ ಕಂಡತ್ತು. ಅದರ ಅಕ್ಕಿಯೊಟ್ಟಿಂಗೆ ಹಾಕಿ ಕಡದು ದೋಸೆ ಮಾಡಿದೆ" ಹೇಳಿಯೋ,
"ನಾಲ್ಕು ದಿನದ ಹಿಂದಾಣ ದೋಸೆ ಹಿಟ್ಟಿದ್ದತ್ತು ಫ್ರಿಡ್ಜಿಲಿ, ಅದಕ್ಕೆ ಒಂದು ಈರುಳ್ಳಿ, ಎರಡು ಹಸಿ ಮೆಣಸು, ರಜ್ಜಾ ಕಾಯಿ ಎಲ್ಲಾ ಹಾಕಿ ದೋಸೆ ಮಾಡಿದ್ದು!" ಹೇಳಿಯೋ,
"ಎರಡು ಸೌಟು ಗೋಧಿ ಹಿಟ್ಟು,ಎರಡು ಸೌಟು ದೋಸೆ ಹಿಟ್ಟು, ರಜ್ಜ ಇಡ್ಲಿ ಹಿಟ್ಟಿಗೊ ಎಲ್ಲಾ ಇದ್ದತ್ತು, ಎಲ್ಲಾ ಒಟ್ಟು ಮಾಡಿ ಲಾಯ್ಕಲ್ಲಿ ದೋಸೆ ಮಾಡಿದೆ, ಹಾಂಗೆ ರಜ ಚಪಾತಿ ಹಿಟ್ಟಿದ್ದತ್ತು, ನಾಲ್ಕು ಚಪಾತಿದೇ ಮಾಡಿದೆ!" 
ಮಧ್ಯಾನ್ಹಕ್ಕೆಂತ ಮಾಡಿದಿ?
"ನಾಲ್ಲು ಕ್ಯಾರೆಟ್ ಕೊಳವಲೆ ಶುರುವಾಗಿತ್ತು, ಎರಡು ಬಟಾಟೆ ಮೋಂಗೆ ಬಂದೊಂಡಿದ್ದತ್ತು,ಎರಡು ನುಗ್ಗೆ ಕೊಂಬು ವಣಗಿಕೊಂಡಿದ್ದತ್ತು,ಟೊಮ್ಯಾಟೊ ಕೂಡಾ ಹಾಳಪ್ಪಾಂಗೆ ಆಗಿತ್ತು, ಎಲ್ಲದರ ಕೊರದು ರಜ ತೊಗರಿ ಬೇಳೆದೇ ಹಾಕಿ ಒಂದು ಕೊದಿಲು ಮಾಡಿದೆ,ಬದನೆಕಾಯಿದೇ ಹಾಳಪ್ಪಲೆ ಶುರುವಾಗಿತ್ತು, ಅದರ ಗ್ಯಾಸಿಲಿ ಸುಟ್ಟುಹಾಕಿ ಒಂದು ಗೊಜ್ಜು ಮಾಡಿದೆ!" ಇದು ಇಂದಿನ ಶಾಕಪಾಕ, ನಾಳಂಗೆ ಆ ಬೀಟ್ ರೂಟ್ ತಂದದು ಚಿರುಟುಲೆ ಶುರುವಾಯಿದು ಅದರ ಸಾಂಬಾರೋ ಪಲ್ಯವನ್ನೋ ಮಾಡೇಕು, ಹಾಂಗೆ ಮೂಲಂಗಿದೇ ಇದ್ದು, ಹಾಗಲಕಾಯಿದೇ ಹಾಳಪ್ಪಾಂಗೆ ಕಂಡತ್ತು......!ಯಾವುದರ ಮಾಡಿ ಮೊದಾಲು ಮುಗುಶುದು ಹೇಳಿಯೇ ಗೊಂತಾವುತ್ತಿಲ್ಲೆ! ಇದರ ಒಟ್ಟಿಂಗೆ ಫ್ರಿಡ್ಜಿಲಿ ಇನ್ನೂ ಬೇಕಾದಷ್ಟು ತರಕಾರಿಗೊ, ಹಣ್ಣುಗೋ ಶಿಥಿಲಾವಸ್ಥೆಲಿರುತ್ತು! ಆದರೆ ಮಾತನಾಡುವಾಗ ಹೇಳುಲೆ ಮರದೋಗಿರುತ್ತು ಅಷ್ಟೇ! ಅಂತೂ ತಾಜಾ ಉಪಾಹಾರಂಗಳ ಸೇವನೆ ಬಲು ಅಪರೂಪವೇ!
ಹೀಂಗೆ ಹೇಳುದು,ಹೀಂಗೆಲ್ಲಾ ಕೊಳದ, ಹಾಳಾದ, ಒಣಗಿದ, ಚಿರುಟಿ ನೀರಾರಿದ, ಬಾಡಿ ಬೆಂಡಾದ ತರಕಾರಿಗಳ ಉಪಯೋಗಿಸಿ ಅಡುಗೆ ಮಾಡುದು ಪೇಟೆಗಳಲ್ಲಿ ಮಾಮೂಲಿ ಆಗಿ ಹೋಯಿದು! ಈ ತರಕಾರಿಗಳ ರೇಟು ಎಲ್ಲಾ ಈಗ ಪ್ರತೀ ಕೇಜಿಗೆ ಸರಾಸರಿ ಹೇಳುತ್ತರೆ ನಲವತ್ತು ಐವತ್ತು ರೂಪಾಯಿಗಳ ಮೇಲೇ ಇಪ್ಪದು! ಹಾಂಗಿಪ್ಪಗ ಆಫರಿಲಿ ಕಡಮ್ಮೆ ರೇಟಿಲಿ ತರಕಾರಿ, ಹಣ್ಣುಗೊ ಸಿಕ್ಕಿದರೆ ಆರಿಂಗೆ ಬೇಡದ್ದು?! ಪೇಪರಿಲೋ, ಟಿ.ವಿಲೋ ಅಡ್ವಟೈಸ್ ಮೆಂಟ್ ಮೂಲಕ ಇಂದು ತರಕಾರಿ, ಹಣ್ಣು ಹಂಪಲು ಖರೀದಿಲಿ ಭಾರೀ ರಿಯಾಯಿತಿ ಇದ್ದು ಮಾಲುಗಳಲ್ಲಿ ಹೇಳಿ ಗೊಂತಾದ ಕೂಡಲೇ ಎಂತಾ ಕೆಲಸ ಇದ್ದರುದೇ ಬಿಟ್ಟಿಕ್ಕಿ ಅಲ್ಲಿಗೆ ಹೋಗಿ ಬೇಕಾದ್ದರ, ಬೇಡದ್ದರ ಎಲ್ಲಾ ಕಟ್ಟಿ, ಕಣ್ಣುಮುಚ್ಚಿ ಪೈಸೆಲಿ ಡಿಸ್ಕೌಂಟಿದ್ದಲ್ಲದಾ ಹೇಳಿ ತಂದು ಫ್ರಿಡ್ಜ್ ತುಂಬಿಸುದು ಈಗಾಣವರ ಕ್ರಮ! ಕಮ್ಮಿ ಕ್ರಯಲ್ಲಿ ಸಿಕ್ಕಿತು ಹೇಳಿ ಮಾತ್ರ ತೃಪ್ತಿ ಪಟ್ಟುಕೊಳ್ಳೇಕಷ್ಟೇ ನಾಲ್ಕು ದಿನಂಗಳ ಮಟ್ಟಿಂಗೆ. ಮತ್ತೆ ಮೇಗೆ ಹೇಳಿದಾಂಗೆ ಪೈಸೆಕೊಟ್ಟು ತಂದ ಬೆಶಿಗೆ ಹಾಳಾದ್ದರ...ಕೊಳ...ಒಣ...ಚಿರುಟಿ....ಹೀಂಗೆ ಎಲ್ಲದರ ತಿಂದಿಕ್ಕಿ ಎಂತಾರೂ ಹಿಡಿಶಿಯೊಂಡು ಡಾಕ್ಟರ ಹತ್ತರೆ ಹೋದಪ್ಪಗ ಗೊಂತಾವುತ್ತು  ’ತಿಂದ ಆಹಾರಂದಾಗಿ’ ಆರೋಗ್ಯಲ್ಲಿ ಏರುಪೇರಾಯ್ದು ಹೇಳಿ! ಅಂಬಾಗ ಗ್ರೇಶೊದು ನಾವು ಎಲ್ಲಿಯಾದರೂ ಹೆರ ಹೋಟೇಲಿಲಿ ಉಂಡಿದಾ ಹೇಳಿ! ಮನೇಲಿ ಎಂತ ಮಾಡಿದರೂ ಅದು ಕ್ಲೀನ್ ಹೇಳಿಯೇ ಲೆಕ್ಕ! ಹೀಂಗಿಪ್ಪ ತರಕಾರಿಗಳ ಎಷ್ಟು ಕ್ಲೀನಿಲಿ ಮಾಡಿದರುದೇ ಅಷ್ಟೇ! ಫ್ರಿಡ್ಜಿನೊಳ ಹಾಳಪ್ಪ ತರಕಾರಿಗಳಲ್ಲಿ,ನಾಳಂಗೆ,ನಾಳ್ತಿಂಗೆ ಹೇಳಿ ಮಡುಗಿದ ಆಹಾರಂಗಳಲ್ಲೆಲ್ಲಾ ವೈರಸ್ಸುಗೊ ಹೇಂಗೆ ಬೆಳತ್ತು ಗೊಂತಿದ್ದಾ? ನಾವು ನಾವು ಮಾಡಿಕೊಂಡ ಅನಾಹುತಂಗಳ ಆರ ಮೇಲೂ ಹಾಕುದು ಬೇಡ! ಮತ್ತೆ ಫ್ರಿಡ್ಜಿಲಿ ದಾಸ್ತಾನಿಪ್ಪದು ಬರೀ ತರಕಾರಿಗೊ ಮಾಂತ್ರ ಅಲ್ಲ! ಇರುಳು ಉಂಡ ನಂತರ ಬಾಕಿಯಾದ ಒಂದು ರಜ ಉಳುದ್ದರ ಎಲ್ಲಾ ಹಾಂಗೆ ನಾಳಂಗಾತು ಹೇಳಿ ಮಡುಗುದು, ಮತ್ತೆ ಅದು ಇಪ್ಪದು ಮರತೋ, ಇಲ್ಲೆ ಹೇಳಿಯಾದರೆ ಶನಿವಾರ, ಗುರುವಾರ, ಸೋಮವಾರ, ಮಂಗಳ ಶುಕ್ರವಾರಂಗಳ ಉಪವಾಸದ ಹೇಳೆಲಿ ಹಳತ್ತರ ಉಂಬಲಿಲ್ಲೆ ಹೇಳಿ ಮಡುಗಿದ ಅದೇ ಪದಾರ್ಥಂಗೊ ನಾಳ್ತಿಂಗೆ ಉಳಿವದು! ಮತ್ತೆ ಆ ದಿನ ನೆಂಪಾಗಿ ತಿಂದಪ್ಪಗ ಹೋಟೇಲಿಲಿ ಆಹಾರ ತಿಂದದ್ದಕ್ಕಿಂತ ಡೇಂಜರ್ ಆಗಿರುತ್ತು ಪರಿಣಾಮ! ಮತ್ತೆ ಹೆಳೆ ಹೆರ ಹೋಟೇಲಿ ಉಂಡದ್ದರಿಂದ ಆದಿಕ್ಕು, ಜೆಂಬರಲ್ಲಿ ಉಂಡದರಿಂದ ಆದಿಕ್ಕು ಹೊಟ್ಟೆ ಸರಿ ಇಲ್ಲದ್ದು ಹೇಳಿ!ಪಾಪ ಅಲಿಯಾಣ ಅಡುಗೆ ಭಟ್ಟಕ್ಕೊ ಕೊಳದ ತರಕಾರಿಗಳ ಪದಾರ್ಥ ಎಲ್ಲಾ ಮಾಡಿಯಾಗಲೀ ಬಡಿಸುತ್ತವಿಲ್ಲೆಪ್ಪಾ, ನಾಲ್ಕು ದಿನದ ಹಿಂದಾಣದ್ದಾಗಲೀ ತಿನ್ನುಸುತ್ತವಿಲ್ಲೆಪ್ಪಾ! ಕೆಲವು ಹೋಟೇಲುಗಳಲ್ಲಿ ಎಲ್ಲೋ ಹಿಂದಾಣ ದಿನದ್ದಿಕ್ಕಷ್ಟೇ ಹೊರತು ನಾಲ್ಕು, ಎಂಟು ದಿನಗಳದ್ದರೆಲ್ಲಾ ದಾಸ್ತಾನು ಮಡುಗಿ ಬಡಿಸುತ್ತವಿಲ್ಲೆಪ್ಪಾ ಮನೆಲಿ ಫ್ರಿಡ್ಜಿಲಿ ಮಡುಗಿ ತಿಂಬ ಹಾಂಗೆಲ್ಲಾ!ಎಲ್ಲಿಯೋ ನಾಲ್ಕಾರು ಕಡೆ ನಿರ್ಲಕ್ಷ್ಯಲ್ಲಿ ಮಾಡುಗಷ್ಟೇ.
ಉಪಾಯ ಎಂತ ಮಾಡುಲಕ್ಕು ಹೇಳಿರೆ ಹಾಂಗೆ ಆಫರಿಲಿ ಕಮ್ಮಿ ಪೈಸೆಗೆ ತರಕಾರಿ ಸಿಕ್ಕಿತು ಹೇಳಿಯಾದರುದೇ ನಾಲ್ಕು ದಿನಕ್ಕೆ ಬೇಕಾದಷ್ಟು ಮಾಂತ್ರ ತನ್ನಿ.ಆಫರಿಲಿ ಸಿಕ್ಕುವ ಎಲ್ಲಾ ವಸ್ತುಗೊ ಲಾಯ್ಕಿರುತ್ತಿಲ್ಲೆ.ಹೆಚ್ಚು ದಿನ ಒಳಿತ್ತೂ ಇಲ್ಲೆ.ಮನೆ ಹತ್ತರೆ ರಜಾ ಒಂದು ನಾಲ್ಕಡಿ ಜಾಗೆ ಇದ್ದರೂ ಸಾಕು ಒಂದು ಬಸಳೆ ಬುಡವನ್ನೋ,ತೊಂಡೆ ಬುಡವನ್ನೋ ಇಂದೇ ನಟ್ಟು ಅದಕ್ಕೆ ಬೇರೆಂತ ಗೊಬ್ಬರ ಬೇಡ-ತರಕಾರಿ ಹಣ್ಣುಗಳ ಚೋಲಿ, ಅಕ್ಕಿ ತೊಳದ ನೀರು, ಅಶನಂದ ಬಗ್ಗಿಸಿದ ಗಂಜಿ, ತೆಳಿ, ಮತ್ತೆಂತಾರೂ ಫ್ರಿಡ್ಜಿಲಿ ಸಂಪೂರ್ಣ ಕೊಳದ ತರಕಾರಿ, ಹಣ್ಣುಗಳು, ಒಳುದ ಹಿಂದಾಣ ದಿನದ ಅಥವಾ ಅದಕ್ಕಿಂತಲೂ ಹೆಚ್ಚು ದಿನ ಆದ ಆಹಾರದೇ ಅದಕ್ಕೆ ಆಹಾರ ಅಕ್ಕು!!ಅದೆಲ್ಲಾ ಅದಕ್ಕೆ ಫುಡ್ ಪಾಯಿಸನ್ ಅಪ್ಪ ಕ್ರಮ ಇಲ್ಲೆ! ಕೊಳದಷ್ಟೂ ಅದಕ್ಕೆ ಒಳ್ಳೆಯದೇ! ಆದರೆ ಫಲವಾಗಿ ನಮಗೆ ಸಿಕ್ಕುವ ತರಕಾರಿ ತಾಜಾ, ರಾಸಾಯನಿಕದ ಹೊರತಾಗಿರುತ್ತು. ವಾರಲ್ಲಿ ಒಂದೆರಡು ದಿನವಾದರೂ ನಾವು ಬೆಳದ ತರಕಾರಿಯನ್ನೇ ತಿಂಬಲಕ್ಕು.ಹೀಂಗೇ ನಾವು ಬೆಳದ ತರಕಾರಿ ಒಂದು ನಾಲ್ಕು ಸಲ ತಿಂದಪ್ಪಗ ಛೇ ರಜಾ ಹೆಚ್ಚು ಜಾಗೆ ಇದ್ದಿದ್ದರೆ ಇನ್ನುದೇ ಬೆಳಕೊಂಬಲಾವುತ್ತಿತ್ತು ಹೇಳಿ ಅನ್ನಿಸದ್ದೇ ಇರ. ಅಂಬಗಲೂ ಉಪಾಯ ಇದ್ದು! ಎಂಟು, ಹತ್ತು ಗೋಣಿ ಚೀಲಂಗಳಲ್ಲಿ ಮಣ್ಣು ತುಂಬಿಸಿದೇ ಮನೇಲಿ ಸಿಕ್ಕುವ ತರಕಾರಿ, ಹಣ್ಣುಗಳ ಚೋಲಿ- ಅಡುಗೆ ಮನೆಯ ತ್ಯಾಜ್ಯಂದ, ಕಾಟುಸೊಪ್ಪುಗಳಿಂದ ಸುಲಾಭಲ್ಲಿ ತರಕಾರಿ ಬೆಳಕೊಂಬಲಕ್ಕು. ಇತ್ತೀಚೆಗಂತೂ ಮನೆಯ ತಾರಸಿಲೆಲ್ಲಾ ವಾಟರ್ ಪ್ರೂಫ್ ಟೆರೇಸ್ ಮಾಡಿಯೊಂಡು ಮನೆಗೆ ಬೇಕಾದ ನೆಟ್ಟಿಕ್ಕಾಯಿಯ ಬೆಳಕೊಂಬ ವ್ಯವಸ್ಥೆ ಶುರುವಾಯಿದು. ಉದಾಸೀನ ಬಿಟ್ಟು ಹೀಂಗೆಲ್ಲಾ ಬೆಳದುಕೊಂಡರೆ ದೇಹಕ್ಕೆ ಬೇಕಾದ ವ್ಯಾಯಾಮ ತನ್ನಿಂದ ತಾನೇ ಸಿಕ್ಕುತ್ತು, ಹಾಂಗೇ ರಾಸಾಯನಿಕ ರಹಿತವಾದ ತಾಜಾ ತರಕಾರಿಗಳ ತಿಂದು ನಮ್ಮ ನಮ್ಮ ಆರೋಗ್ಯ, ಆಯುಷ್ಯವನ್ನು ವೃದ್ಧಿಸಿಕೊಂಬಲಕ್ಕು.

ತ್ರಿವೇಣಿ ವಿ ಬೀಡುಬೈಲು
ಮಂಗಳೂರು

No comments:

Post a Comment