Thursday, June 25, 2015

"ಮಮ್ಮಿ" - ಸಣ್ಣ ಕಥೆ

ಮಮ್ಮಿ
ಕೆಲಸಗಳನ್ನೆಲ್ಲಾ ಮುಗಿಸಿ ಗಂಟೆ ನೋಡಿದಳು ಶ್ಯಾಮಲ. ಸಂಜೆ ಐದಾಗಿತ್ತು. ನಡುಕೋಣೆಗೆ ಬಂದು ಟಿ.ವಿ ನೋಡುತ್ತಾ ಕುಳಿತಳು. ರಾಮಣ್ಣ ಹುಡುಗನೊಂದಿಗೆ ಬರಬಹುದೆಂದುಕೊಂಡಳು.
_________________
ಹಿಂದಿನ ದಿನ ಸಂಜೆ ಗಂಡನೊಂದಿಗೆ ವಾಕಿಂಗ್ ಹೋಗಿದ್ದಳು ಶ್ಯಾಮಲ. ನಾಲ್ಕಾರು ಮನೆಗಳಿಗೆ ಹಸುವಿನ ಹಾಲು ಮಾರುವ ರಾಮಣ್ಣ ಇದಿರಾಗಿದ್ದ. ದಾರಿಯಲ್ಲೋ, ಬಸ್ಸಿನಲ್ಲೋ ಆಗಾಗ್ಗೆ ಕಂಡು ಮಾತ್ರ ಪರಿಚಯವಿದ್ದ ಕಾರಣ, ಎದುರೆದುರು ಭೇಟಿಯಾದಾಗ ಪರಸ್ಪರ ಮುಗುಳ್ನಗೆಯಾಡುತ್ತಿದ್ದರವರು. ಇವರು ವಾಸಿಸುತ್ತಿರುವ ಬೀದಿಯಿಂದ ನಾಲ್ಕನೆಯೋ ಐದನೆಯೋ ಬೀದಿಯಲ್ಲಿರಬಹುದು ರಾಮಣ್ಣನ ಮನೆ. ಎಲ್ಲಿ ಎಂದು ಖಚಿತವಾಗಿ ಗೊತ್ತಿರಲಿಲ್ಲ ಅವರಿಗೆ. ಅವನಿಗೆ ಮೂರು ಕರೆಯುವ ಹಸುಗಳಿವೆ ಎಂದು ಪಕ್ಕದ ಮನೆಯ ಪದ್ಮ ಹೇಳಿ ಗೊತ್ತಿತ್ತು.
"ಇಲ್ಲಿ ಯಾರಾದ್ರೂ ಟ್ಯೂಶನ್ ಕೊಡುವವರಿದ್ದಾರಾ?" ಎಂದು ಪ್ರಶ್ನಿಸುತ್ತಾ ರಾಮಣ್ಣ ಇವರ ಹತ್ತಿರ ಬಂದ.
"ಯಾವ ಕ್ಲಾಸಿಗೆ?" ಕೇಳಿದಳು ಶ್ಯಾಮಲ.
"ಎರಡನೇ ಕ್ಲಾಸಿಗೆ, ಇಂಗ್ಲಿಷ್ ಮೀಡಿಯಂ ಹುಡುಗ"
"ನಿಮ್ಮ ಮಗನಿಗೇನು?" ಶ್ಯಾಮಲಾಳ ಗಂಡ ರಘು ಕೇಳಿದ.
"ಅಲ್ಲ, ನನ್ನ ಅಕ್ಕನ ಮಗನಿಗೆ" ಉತ್ತರಿಸಿದ ರಾಮಣ್ಣ.
ಶ್ಯಾಮಲಳಿಗೆ ಸಂಜೆ ಹೊತ್ತು ಕಳೆಯಲು ಏನಾದರೂ ಕೆಲಸ ಬೇಕಿತ್ತು. ’ನಾನೇ ಹೇಳಿಕೊಡಬಹುದಲ್ಲವೇ’ ಎಂದಾಲೋಚಿಸಿ, "ಹುಡುಗನಿಗೆ ನಾನೇ ಪಾಠ ಹೇಳಿಕೊಡುವೆ ಬೇಕಾದ್ರೆ" ಎಂದಳು. ಸಾಕಾಷ್ಟು ಡಿಗ್ರಿ ಪಡೆದುಕೊಂಡಿದ್ದರೂ ಆಕೆಗೆ ದುರದೃಷ್ಟವಶಾತ್ ಎಲ್ಲೂ ಕೆಲಸ ಸಿಕ್ಕಿರಲಿಲ್ಲ.
"ಸರಿ ಅಮ್ಮ. ನಾಳೆ ಸಂಜೆ ಹುಡುಗನನ್ನು ಕರಕೊಂಡು ನಿಮ್ಮಲ್ಲಿಗೆ ಬರುತ್ತೇನೆ" ಎನ್ನುತ್ತಾ ಹೊರಟನಾತ.
"ನಮ್ಮ ಮನೆ ಗೊತ್ತಿದ್ಯಾ ನಿನಗೆ?" ಕೇಳಿದ ರಘು.
"ಓ ಗೊತ್ತಿದೆ ಸ್ವಾಮಿ, ಅದೇ ಆ ಬೀದಿಯ ಎರಡನೇ ಮನೆಯಲ್ಲವೇ?" ಎಂದು ಬೆರಳು ಮಾಡಿ ತೋರಿಸಿದ. "ನಿಮ್ಮ ಪಕ್ಕದ ಮನೆಗೆ ಹಾಲು ಹಾಕಲು ಬರುವಾಗ ಅಮ್ಮಾವ್ರನ್ನ ನೋಡಿದ್ದೇನೆ"ಎನ್ನುತ್ತಾ ಶ್ಯಾಮಲಾಳನ್ನು ನೋಡಿ ಹಲ್ಲುಕಿಸಿದ.
__________
"ಅಮ್ಮಾ, ಅಮ್ಮಾ" ರಾಮಣ್ಣ ಹೊರಗಿನಿಂದ ಕರೆದ.
ಶ್ಯಾಮಲ ಟಿ.ವಿ. ಆರಿಸಿ ಹೊರಗೆ ಬಂದಳು. ಸಂಜೆ ಹೇಳಿದಂತೆ ರಾಮಣ್ಣ ಹುಡುಗನೊಂದಿಗೆ ಬಂದಿದ್ದ. ಶ್ಯಾಮಲ ಅವರಿಬ್ಬರನ್ನೂ ಒಳಗೆ ಕರೆದಳು.
"ಅಮ್ಮ ನೋಡಿ ಇವನನ್ನೇ ನಾನು ನಿನ್ನೆ ಹೇಳಿದ್ದು"
"ಹೌದಾ? ಯಾವ ಕ್ಲಾಸಪ್ಪಾ ನೀನು?" ಕೇಳಿದಳು ಶ್ಯಾಮಲ ಹುಡುಗನ ತಲೆ ನೇವರಿಸುತ್ತಾ.
"ಸೆಕೆಂಡ್ ಸ್ಟಾಂಡರ‍್ಡ್" ಎಂದ.
"ಇವನಿಗೆ ಎಲ್ಲಾ ಸಬ್ಜೆಕ್ಟ್‍ಗಳನ್ನೂ ಹೇಳಿಕೊಡಬೇಕಂತೆ. ಎಷ್ಟು ಫೀಸಾಗುತ್ತೆ ಅಮ್ಮಾ?" ಕೇಳಿದ ರಾಮಣ್ಣ.
"ಹುಡುಗ ಚೆನ್ನಾಗಿ ಕಲಿತರೆ ಅದೇ ಫೀಸು, ಅಲ್ವೇನೋ" ಹುಡುಗನನ್ನು ನೋಡಿ ನಗುತ್ತಾ ಹೇಳಿದಳು ಶ್ಯಾಮಲ.
"ಹ್ಹೆ ಹ್ಹೆ ಹ್ಹೆ... ಹಾಗೆ ಹೇಳಿದರೆ ಹೇಗಮ್ಮಾ?! ಹುಡುಗನ ತಂದೆ...ಅದೇ ನನ್ನ ಭಾವ ನಿಮ್ಮ ಹತ್ತಿರ ಕೇಳಿಕೊಂಡು ಬರಲು ಹೇಳಿದ್ದರು...." ಎನ್ನುತ್ತಾ ತಡವರಿಸಿದನಾತ.
"ಅದೆಲ್ಲಾ ಏನೂ ಬೇಡ...ಮೊದಲು ಅವನು ನಾನು ಹೇಳಿಕೊಟ್ಟದ್ದನ್ನು ಚೆನ್ನಾಗಿ ಕಲಿತು ಒಳ್ಳೆಯ ಮಾರ್ಕು ತೆಗೆಯಲಿ, ಅಷ್ಟೇ ಸಾಕು" ಎನ್ನುತ್ತಾ ಪುನ: ನಕ್ಕಳು ಶ್ಯಾಮಲ.
"ಹೂಂ...ನೀವು ಹೇಗೆ ಹೇಳ್ತೀರೋ ಹಾಗೆ...ನನಗೆ ಇನ್ನೂ ನಾಲ್ಕು ಮನೆಗಳಿಗೆ ಹಾಲು ಹಾಕಲಿದೆ ಅಮ್ಮಾ... ಪಾಠ ಮುಗಿದ ನಂತರ ಹುಡುಗನನ್ನು ಕಳುಹಿಸಿಬಿಡಿ" ಎನ್ನುತ್ತಾ ಹಾಲಿನ ಕ್ಯಾನಿನೊಂದಿಗೆ ಹೊರಟು ಹೋದ ರಾಮಣ್ಣ.
ಶ್ಯಾಮಲ ಬಾಗಿಲು ಹಾಕಿ ಬಂದು ಹುಡುಗನ ಪಕ್ಕ ಕುಳಿತಳು.
"ಏನಪ್ಪಾ ನಿನ್ನ ಹೆಸರು?"
"ಪ್ರದೀಪ್" ಮುದ್ದಾಗಿ ಹೇಳಿದ ಹುಡುಗ.
"ಮನೇಲಿ ಯಾವ ಭಾಷೆ ಮಾತಾಡೋದು?"
"ತುಳು"
"ಶಾಲೆಯಲ್ಲಿ ಇಂಗ್ಲೀಷಾ?"
ಹೌದೆಂದು ತಲೆಯಾಡಿಸುತ್ತಾ, "ಕನ್ನಡ ಬರಲ್ಲ" ಎಂದ.
"ಮತ್ತೆ ಇಷ್ಟು ಚೆನ್ನಾಗಿ ಮಾತನಾಡುತ್ತಿದ್ದೀ!"
"ಸ್ವಲ್ಪ ಸ್ವಲ್ಪ ಬರುತ್ತದಷ್ಟೇ" ಎನ್ನುತ್ತಾ ನಕ್ಕ.
"ನಾನೀಗ ನಿನ್ನ ಜೊತೆ ಕನ್ನಡದಲ್ಲೇ ಮಾತಾಡೋದು ಆಯ್ತಾ...ನೋಡೋಣ ನಿನಗೆ ಬರುತ್ತೋ ಇಲ್ವೋ ಅಂತ....ಹೂಂ ಸರಿ...ಈಗ ಹೇಳು ನಿಮ್ಮ ಮನೆಯಲ್ಲಿ ಯಾರ‍್ಯಾರಿದ್ದಾರೆ?"
"ಡ್ಯಾಡಿ, ಅಜ್ಜಿ ಮತ್ತು ನಾನು"
"ಅಜ್ಜಿ ಅಂದ್ರೆ ನಿನ್ನ ಡ್ಯಾಡಿಯ ಅಮ್ಮನಾ?"
"ಹೂಂ"
"ಮಮ್ಮಿ ಎಲ್ಲಿ?"
"ಅಜ್ಜಿ ಮನೆಗೆ ಹೋಗಿದ್ದಾರೆ" ಬೇಸರದಿಂದ ಹೇಳಿದ ಪ್ರದೀಪ್.
"ಮತ್ತೆ ನಿನ್ನ ರಾಮಣ್ಣ ಮಾವ ಎಲ್ಲಿರೋದು?"
"ಅವರು ನಮ್ಮ ಮನೆಯ ಪಕ್ಕದಲ್ಲಿ"
ನೀನು ನಿನ್ನ ಡ್ಯಾಡಿಯೊಟ್ಟಿಗೆ ಬಾರದೆ ಮಾವನೊಟ್ಟಿಗೆ ಬಂದದ್ದೇಕೆ?"
"ಡ್ಯಾಡಿ ಇನ್ನೂ ಮನೆಗೆ ಬಂದಿಲ್ಲ"
"ಡ್ಯಾಡಿ ಯಾವ ಕೆಲಸದಲ್ಲಿದ್ದಾರೆ?"
"ಫ್ಯಾಕ್ಟ್ರಿಯಲ್ಲಿ ಇಂಜಿನಿಯರ್"
"ಮನೆಯಲ್ಲಿ ನಿನಗೆ ತಿಂಡಿ ಮಾಡಿಕೊಡೋದು ಯಾರು?"
"ಅಜ್ಜಿ, ಎಲ್ಲಾ ಅಜ್ಜಿನೇ ಈಗ, ಮಮ್ಮಿ ಅಜ್ಜಿ ಮನೆಗೆ ಹೋದ ಮೇಲೆ" ಎಂದು ಹೇಳಿದ ಬೇಸರದಿಂದ ತಲೆ ತಗ್ಗಿಸುತ್ತಾ.
"ಅಯ್ಯೋ ಕೇಳಿದ್ದು ತಪ್ಪಾಯಿತೇ ಎಂದಾಲೋಚಿಸಿದಳು ಶ್ಯಾಮಲ.
"ನಿನ್ನಪ್ಪ ಅಮ್ಮನಿಗೆ ನೀನೊಬ್ಬನೇ ಮಗನಾ?"
"ಅಲ್ಲ, ನನಗೆ ತಂಗಿಯೊಬ್ಬಳಿದ್ದಾಳೆ" ಹುಡುಗನ ಮುಖವರಳಿತು.
"ಹೌದಾ?!" ಆಶ್ಚರ್ಯದಿಂದ ಕೇಳಿದಳು ಶ್ಯಾಮಲ.
ಬಹುಶ: ಗಂಡ ಹೆಂಡತಿಗೆ ಜಗಳವಾಗಿ ಅಥವಾ ಅತ್ತೆ ಸೊಸೆಗೆ ಜಗಳವಾಗಿ ಪ್ರದೀಪ್‍ನ ತಾಯಿ ಕೋಪಿಸಿಕೊಂಡು ಮಗಳೊಂದಿಗೆ ತವರಿಗೆ ಹೋಗಿರಬೇಕು...ಛೇ ಎಂತಹ ಹೆಂಗಸಿರಬಹುದವಳು! ಇಂತಹ ಮುದ್ದಾದ ಹುಡುಗನನ್ನು ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂದಿತವಳಿಗೆ? ಪಾಪ ಪ್ರದೀಪ್ ಎಂದುಕೊಂಡಳು.
"ಮಮ್ಮಿ ಯಾವಾಗ ಹೋದದ್ದು ಪುಟ್ಟಾ? ಯಾವಾಗ ವಾಪಸು ಬರುತ್ತಾಳೆ?"
"ಅವತ್ತೇ ಹೋಗಿದ್ದಾಳೆ. ಆಮೇಲೆ ಬರಲೇ ಇಲ್ಲ. ಡ್ಯಾಡಿ ಹತ್ತಿರ ಯಾವಾಗ ಕೇಳಿದರೂ ಸ್ವಲ್ಪ ದಿನ ಬಿಟ್ಟು ಬರುತ್ತಾಳೆಂದು ಹೇಳುತ್ತಿರುತ್ತಾರೆ ಆಂಟೀ...ಇನ್ನೂ ಬಂದಿಲ್ಲ" ಹೇಳಿದ ಪ್ರದೀಪ್ ಕಣ್ಣಿನಲ್ಲಿ ನೀರು ತುಂಬಿಕೊಂಡು.
"ಯಾಕಪ್ಪಾ ಕಣ್ಣಲ್ಲಿ ನೀರು?" ತಲೆ ನೇವರಿಸುತ್ತಾ ಕೇಳಿದಳು.
"ಮಮ್ಮಿಯಿಲ್ಲದೇ ತುಂಬಾ ಬೇಜಾರು"
ಶ್ಯಾಮಲಾಳ ಮನಸ್ಸಿನಲ್ಲೀಗ ಸಂಶಯಕ್ಕೆಡೆಯೇ ಇರಲಿಲ್ಲ. ಖಂಡಿತವಾಗಿ ಜಗಳ ಮಾಡಿಕೊಂಡು ಪ್ರದೀಪ್‍ನನ್ನು ಗಂಡನೊಟ್ಟಿಗೆ ಬಿಟ್ಟು ಮಗಳೊಂದಿಗೆ ಹೋಗಿಬಿಟ್ಟಿದ್ದಾಳೆ ತವರಿಗೆ. ಪ್ರದೀಪ್‍ನನ್ನು ಸಮಾಧಾನ ಮಾಡಲೋಸ್ಕರ ಮಮ್ಮಿ ಬರುತ್ತಾಳೆ ಎಂದು ಹೇಳಿರಬೇಕು ಅವನಪ್ಪ ಎಂದುಕೊಂಡಳು. ಗಂಡ-ಹೆಂಡತಿ ಅಥವಾ ಅತ್ತೆ-ಸೊಸೆಯರ ನಡುವೆ ಮನಸ್ತಾಪವಾದಾಗ ಬದುಕಿನ ಪ್ರಮುಖ ಗಳಿಗೆಗಳನ್ನು ಕಳೆದುಕೊಳ್ಳುವ ಬದಲು, ಇಂತಹ ಮುಗ್ಧ ಮಕ್ಕಳನ್ನು ಏಕಾಂಗಿಯನ್ನಾಗಿ ಮಾಡುವ ಬದಲು, ತಮ್ಮ ಜೀವನದ, ಮಕ್ಕಳ ಮುಂದಿನ ಬೆಳವಣಿಗೆಯ, ಅವರ ಕಲಿಯುವಿಕೆಯ ಮಹದೋದ್ದೇಶಗಳನ್ನು ಯೋಚಿಸಿ ಹೊಂದಾಣಿಕೆಯಿಂದಿರಲು ಸಾಧ್ಯವಿದ್ದರೂ, ಸಾಧ್ಯವಿಲ್ಲದಂತೆ ಮಾಡಿಕೊಳ್ಳುತ್ತಿದ್ದಾರಲ್ಲಾ ಇಂತಹ ಕೆಲವರು. ಹೀಗಾದರೆ ಇಂತಹ ಮುಗ್ಧ ಮಕ್ಕಳ ಭವಿಷ್ಯ ಹೇಗೆ? ತಾಯಿಯ ಸಾನಿಧ್ಯ ಇಲ್ಲದೆ ಮಾನಸಿಕವಾಗಿ ಎಷ್ಟು ಮುದುಡಿದೆ ಈ ಮಗು! ಇನ್ನು ತಾಯಿಯೊಂದಿಗಿರುವ ಆ ಪುಟ್ಟು ಮಗಳ ಗತಿಯೇನೋ? ಛೇ ಪಾಪ ಎಂದುಕೊಂಡಳವಳು.
ಆಕೆಯ ಕುತೂಹಲ ಇನ್ನೂ ಕೆರಳಿತು.
"ಮಮ್ಮಿ ಯಾವಾಗ ಪುಟ್ಟಾ ಅಜ್ಜಿ ಮನೆಗೆ ಹೋದದ್ದು?"
"ಹೋಗಿ ತುಂಬಾ ತುಂಬಾ ದಿನ ಆಯ್ತು..." ಕೆನ್ನೆ ಮೇಲೆ ಕಣ್ಣೀರಿಳಿದು ಬಂತು.
ಛೇ ತಾಯಿಗಾಗಿ ಎಷ್ಟೊಂದು ಹಂಬಲಿಸುತ್ತಿರುವನು ಪಾಪ. ಕೇಳಬಾರದ್ದನ್ನೆಲ್ಲಾ ಕೇಳಿ ಹುಡುಗನ ಮನಸ್ಸನ್ನು ನೋಯಿಸಿದೆನೆಂದುಕೊಂಡಳು ಶ್ಯಾಮಲ.
ಕೊನೆಯ ಪ್ರಶ್ನೆ ಒಂದನ್ನು ಕೇಳಿಯೇ ಬಿಡೋಣ  ಎಂದುಕೊಂಡು ಶ್ಯಾಮಲ "ನೀನು ಮಮ್ಮಿಯೊಂದಿಗೆ ಹೋಗಲಿಲ್ಲವೇಕೆ?" ಎಂದು ಕೇಳಿದಳು.
"ಡ್ಯಾಡಿ ಬೇಡ ನಿನಗೆ ಸ್ಕೂಲಿದೆ ಎಂದು ಬಿಟ್ಟರು. ನನಗೆ ಹೋಗಲಿಕ್ಕೆ ತುಂಬಾ ಆಸೆ ಇತ್ತು..." ದು:ಖ ಉಮ್ಮಳಿಸಿ ಬಂತವನಿಗೆ.
"ಸರಿ ಪುಟ್ಟಾ, ಬಿಡು ಬೇಸರಪಟ್ಟುಕೊಳ್ಳಬೇಡ ...ಎಲ್ಲಾ ಒಂದು ದಿನ ಸರಿ ಹೋಗುತ್ತೆ ಆಯ್ತಾ... ಕಳೆದ ವರ್ಷ ಎರಡನೇ ತರಗತಿಯಲ್ಲಿದ್ದಾಗ ಟ್ಯೂಶನ್‍ಗೆ ಹೋಗುತ್ತಿದ್ದೆಯಾ ಎಲ್ಲಿಯಾದರೂ?"
"ಇಲ್ಲ, ಮಮ್ಮಿನೇ ಮನೇಲಿ ಹೇಳಿಕೊಡುತ್ತಿದ್ದಳು"
"ಓ ಹೌದಾ? ನಿನ್ನ ತಂಗಿ ಶಾಲೆಗೆ ಹೋಗುತ್ತಿದ್ದಾಳಾ? ಯಾವ ಕ್ಲಾಸು?"
"ಶಾಲೆಗೆ ಹೋಗುವುದಿಲ್ಲ" ಎಂದು ನಕ್ಕು ತಲೆ ಬಗ್ಗಿಸಿದ ಪ್ರದೀಪ್. ಯಾಕೆಂದು ಹೊಳೆಯಲಿಲ್ಲ ಶ್ಯಾಮಲಳಿಗೆ.
"ನಿನಗವಳು ಮನೇಲಿದ್ದಾಗ ಪುಸ್ತಕ, ಪೆನ್ಸಿಲ್ಲು, ಪೆನ್ನು ಇತ್ಯಾದಿಗಳನ್ನೆಲ್ಲಾ ಎಳೆದು ಉಪದ್ರ ಕೊಡುತ್ತಿದ್ದಳೇ?"
"ಇಲ್ಲ ಹ್ಹ....ಹ್ಹ...ಹ್ಹ...ಹ್ಹ...ಇಲ್ಲ" ಎನ್ನುತ್ತಾ ಗಹಗಹಿಸಿ ನಕ್ಕ ಪ್ರದೀಪ್.
"ಯಾಕೋ ನಗಾಡ್ತಾ ಇದ್ದೀಯ?" ಕುತೂಹಲದಿಂದ ಕೇಳಿದಳು ಶ್ಯಾಮಲ.
"ಅವಳಿನ್ನೂ ಚಿಕ್ಕವಳು ಆಂಟಿ"
"ಚಿಕ್ಕವಳು ಎಂದರೆ...?!"
"ಲಾಸ್ಟ್ ವೀಕ್ ಅವಳು ಹುಟ್ಟಿದ್ದು ಆಂಟೀ" ಎಂದು ಹೇಳುತ್ತಾ ಪುನ: ನಕ್ಕ.
ಶ್ಯಾಮಲಾಳಿಗೆ ಮತ್ತರಿವಾಯಿತು ಪ್ರದೀಪ್‍ನ ತಾಯಿ ಹೆರಿಗೆ ಬಾಣಂತನಕ್ಕೆಂದು ತವರಿಗೆ ಹೋಗಿದ್ದಾಳೆಂದು.
"ಎಲ್ಲಿ ನಿನ್ನ ಪುಸ್ತಕಗಳನ್ನೆಲ್ಲಾ ಬ್ಯಾಗಿನಿಂದ ತೆಗೆ... ಪಾಠ ಶುರು ಮಾಡೋಣ" ಎನ್ನುತ್ತಾ ಹಣೆಯಲ್ಲಿ ಮೂಡಿದ್ದ ಬೆವರೊರೆಸಿಕೊಂಡಳು ಶ್ಯಾಮಲ.

ತ್ರಿವೇಣಿ ವಿ ಬೀಡುಬೈಲು,
ಮಂಗಳೂರು.

Tuesday, June 23, 2015

"ದಿನ ಭವಿಷ್ಯ ನಿಜವಾದ ಆ ದಿನ...!" - ಜುಲೈ ೨೦೧೫ ರ ’ಹವ್ಯಕ ವಾರ್ತೆ’ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ.

ದಿನ ಭವಿಷ್ಯ ನಿಜವಾದ ಆ ದಿನ...!
ಉದಿಯಪ್ಪಗಾಣ ಕೆಲಸ ಮುಗುಶಿ ಮನಗೆ ತರುಸುವ ಮೂರು ದಿನಪತ್ರಿಕೆಗಳ ಓದುವಾ ಹೇಳಿ ಸೋಫಾಲ್ಲಿ ಬಂದು ಕೂದೆ. ಜ್ಯೋತಿಷ್ಯಾಸ್ತ್ರಲ್ಲಿ ಅಪಾರ ನಂಬಿಕೆ ಇದ್ದರುದೇ ಆನು ಈ ಪೇಪರಿಲಿ, ಮ್ಯಾಗಜಿನ್‍ಗಳಲ್ಲಿ ಬಪ್ಪಂತಾ ದಿನ ಅಥವಾ ವಾರ ಭವಿಷ್ಯವ ಓದುವ ಕ್ರಮವೇ ಇಲ್ಲೆ. ಇಲ್ಲೆ ಹೇಳಿಯೂ ಪೂರ ಹೇಳುಲೆಡಿತ್ತಿಲ್ಲೆ. ಎಂತಕೆ ಹೇಳಿರೆ ಕೆಲವೊಂದರಿ ಗೊಂತಾಗದ್ದ ಹಾಂಗೆ ಕಣ್ಣುಗೊ ಆ ಅಂಕಣಕ್ಕೆ ಹೋಗಿ ಓದಿ ಹೋಪದೂ ಇದ್ದು! ಹೆಚ್ಚಾಗಿ ಓದದ್ದೇ ಇಪ್ಪದಕ್ಕೆ ಕಾರಣ ಇಷ್ಟೇ. ಒಂದೊಂದರಲ್ಲಿ ಒಂದೊಂದು ನಮೂನೆ ಕೊಟ್ಟಿರ‍್ತವು! ನಿಂಗಳೂ ಎಷ್ಟೋ ಸರ್ತಿ, "ಇದರ ಓದುದೆಂತರ..ಒಂದೊಂದರಲ್ಲಿ ಒಂದೊಂದು ನಮೂನೆ ಬರದಿರ‍್ತವು, ಅದರ ಓದಿಯೊಂಡು ಕೂಪದು ಸುಮ್ಮಗೆ...ಒಂದೂ ಅದರಲ್ಲಿಪ್ಪ ಹಾಂಗೆ ಆವುತ್ತಿಲ್ಲೆ" ಹೇಳಿ ಉಡಾಫೆ ಮಾಡಿಪ್ಪಿ! 

ಸರಿ ಆ ದಿನ ಏಕೋ ಯೇವ ಯೇವ ಪೇಪರಿಲಿ ಎಂತೆಂತ ಕೊಟ್ಟಿದವು ನೋಡುವೋ ಹೇಳಿ ಭಾರೀ ಕುತೂಹಲಂದಲೇ ಓದಿದೆ! ಒಂದು ದಿನಪತ್ರಿಕೆಲಿ ಕೊಟ್ಟಿತ್ತವು, "ಅನಾವಶ್ಯ ತಿರುಗಾಟ"  ಹೇಳಿ! ಮತ್ತೊಂದರ ತೆರೆದು ನೋಡಿದೆ. ಅದರಲ್ಲಿ "ಅನಾವಶ್ಯ ಖರ್ಚು ತಪ್ಪಿದ್ದಲ್ಲ" ಹೇಳಿ! ಅಕೇರಿಗೆ ಎಂಗೊ ತರುಸುವ ಏಕೈಕ ಆಂಗ್ಲ ದಿನಪತ್ರಿಕೆಯ ತೆರದು ನೋಡಿದೆ. ಅದರಲ್ಲಿ "ಟುಡೇ ಯುವರ್ ಡ್ರೀಮ್ಸ್ ವಿಲ್ ಬಿ ಫುಲ್ಫಿಲ್ಡ್" ಹೇಳಿ ಇದ್ದತ್ತು! ಇವರತ್ತರೆ ಇಂತಿಂತಾ ದಿನಪತ್ರಿಕೆಲಿ ಎನ್ನ ದಿನ ಭವಿಷ್ಯವ ಹೀಂಗೀಂಗೆ ಕೊಟ್ಟಿದವು ಹೇಳಿ ಹೇಳಿಕ್ಕಿ, "ಯೇವುದರ ನಂಬುದು ಯೇವುದರ ಬಿಡುದು ಹೇಳಿ ಗೊಂತಾವುತ್ತಿಲ್ಲೆ...ಒಟ್ರಾಸಿ ಏನಾರೊಂದು ಬರದು ಹಾಕುತ್ತವು, ಜೆನರ ಮಂಗ ಮಾಡುಲೆ ಅಲ್ಲದಾ...?!" ಹೇಳಿಯೊಂಡು ನೆಗೆ ಮಾಡಿದೆ! "ನಿನಗೆ ಬೇರೆ ಕೆಲಸ ಇಲ್ಲೆ...ಹೋಗಿ ಹೋಗಿ ಅದರ ಓದುತ್ತೆನ್ನೆ" ಹೇಳಿದವಿವು! ಆನು ಅಂತೇ ಓದಿದ್ದು..ದಿನಾ ಓದುತ್ತೆನಾ...ಓದಿದ್ದರ ಹೇಳಿದ್ದಪ್ಪಾ ಹೇಳಿ ನಸುಕೋಪಲ್ಲಿ ಹೇಳಿ, "ನಿಂಗಳ ರಾಶಿದರ ಓದಿ ಹೇಳೇಕಾ?" ಕೇಳಿದೆ. "ಬೇಡ ಬೇಡ, ಇನ್ನು ಅದರ ಓದಿ ಹೇಳಿ ಮಂಡೆ ಕೆಡ್ಸಿಯೊಂಡು ಎನ್ನ ಮಂಡೆಯನ್ನೂ ಹಾಳು ಮಾಡೇಡ" ಹೇಳಿ ಡೈರೆಕ್ಟಾಗಿ ಹೇಳಿ ಬಿಟ್ಟವಿವು! ಇವು ಬೇಡ ಹೇಳಿದರೂ ಅವರ ರಾಶಿ ಭವಿಷ್ಯವನ್ನೂ ಎನ್ನಷ್ಟಕ್ಕೇ ಓದಿಗೊಂಡೆ! ಒಂದರಲ್ಲಿ,"ನಿಧಾನವೇ ಪ್ರಧಾನ, ಯೋಚಿಸಿ ಕೆಲಸ ಮಾಡಿ, ಮರೆತು ಹೋಗುವ ಸಂದರ್ಭಗಳು ಇದಿರಾಗಬಹುದು" ಒಂದರಿಯಂಗೆ ಎನ್ನ ಮನಸ್ಸಿಲಿ ದುಷ್ಯಂತ ಶಾಕುಂತಲೆ ಕತೆ ನೆಂಪಾಗಿ ಹಾಂಗೇ ಮಾಯ ಆತು! ಸಣ್ಣಕ್ಕೆ ಎನ್ನಷ್ಟಕ್ಕೇ ನೆಗೆ ಮಾಡಿಯೊಂಡು ಇನ್ನೊಂದು ಪತ್ರಿಕೆಯ ತೆರದೆ. ಅದರಲ್ಲಿ "ನಿಮ್ಮ ವೈಯುಕ್ತಿಕ ಸಮಸ್ಯೆಗಳಿಗೆ ಪರಿಹಾರವಿದೆ" ಹೇಳಿ ಇದ್ದತ್ತು! "ಹೂಂ" ಹೇಳಿ ಎನ್ನಷ್ಟಕ್ಕೇ ಹೇಳಿಯೊಂಡು ಮತ್ತೊಂದು ದಿನಪತ್ರಿಕೆಯ ಹಿಡುದೆ. ಅಷ್ಟಪ್ಪಗ ಇವ್ವು ಆಫೀಸಿಂಗೆ ಹೆರಡುವ ಹೊತ್ತಾಗಿತ್ತು. ಪೇಪರಿನ ಮಡಿಸಿ ಅಲ್ಲಿಯೇ ಮಡುಗಿ ಅಡುಗೆ ಕೋಣೆಗೆ ಹೋಗಿ ಬಾಟ್ಲಿಗೆ ನೀರು ತುಂಬುಸಿ ತಂದು ಟೀಪಾಯ್ ಮೇಲೆ ಮಡುಗಿದೆ. ಇವ್ವು ಇವಕ್ಕೆ ಬೇಕಾದ ಇತರ ವಸ್ತುಗಳ ಬ್ಯಾಗಿಂಗೆ ಹಾಕಿಕೊಂಡಿತ್ತವು. ಅಷ್ಟಪ್ಪಗ ಶಾಲೆಂದ ಮಗಳ ಫೋನು, ಅದೂ ಅದರ ಮಾಸ್ಟ್ರನ ಮೊಬೈಲಿಂದ! ಆ ನಂಬರಿನ, ಹಾಂಗೆ ಅದರ ಬೇರೆ ಟೀಚರುಗಕ್ಕಳ ನಂಬರಿನ ಒಂದಲ್ಲಾ ಒಂದು ತುರ್ತು ಸಂದರ್ಭಲ್ಲಿ ಮಗಳು ಶಾಲೆಂದ ಫೋನ್ ಮಾಡಿಪ್ಪಗ ಸೇವ್ ಮಾಡಿತ್ತೆ! ಎಂತಾತಪ್ಪಾ ಹೇಳಿಯೊಂಡು ಗಡಿಬಿಡಿಲಿ ಫೋನು ತೆಗೆದೆ, "ಹಲೋ ಅಮ್ಮ ಆನು" ಹೇಳಿತು ಮಗಳು. ಮಕ್ಕೊಗೆ ಅಗತ್ಯ ಬೇಕಪ್ಪಗೆಲ್ಲಾ ಪಾಪ ಈಗಾಣ ಮಾಸ್ಟ್ರಕ್ಕೊ ಅವರ ಮೊಬೈಲಿನ ಮಕ್ಕೊಗೆ ಮನಗೆ ಕಾಲ್ ಮಾಡುಲೆ ಕೊಡ್ತವಪ್ಪ. "ಎಂತ ಮಗು?" ಹೇಳಿ ಕೇಳಿದೆ. "ಅಮ್ಮ, ಎನ್ನ ಹಿಂದಿ ಪಾಠ ಪುಸ್ತಕದೇ ಹಾಂಗೆ ಹಿಂದಿ ನೋಟ್ಸಿನ ಈಗ ಒಂದು ಹತ್ತು ನಿಮಿಷಲ್ಲಿ ಶಾಲೆಗೆ ತಂದುಕೊಡುವೆಯಾ ಪ್ಲೀಸ್... ಮರತು ಹೋಯಿದು ತಪ್ಪಲೆ...ಈಗ ಇಂಟರ್ವೆಲ್.. ತರ‍್ಡ್ ಪೀರಿಯಡ್ ಹಿಂದಿ ಪಿರಿಯಡಮ್ಮ, ಪುಸ್ತಕ ಇಲ್ಲದ್ದರೆ ಟೀಚರ್ ಬೈಗಮ್ಮ" ಹೇಳಿ ಹೇಳಿತು. "ಆತು ನೀನೀಗ ಪುಸ್ತಕಗೊಂಕ್ಕೆ ಕಾಲ್ ಮಾಡಿ ಮಾತಾಡಿದ್ದು, ಮರತು ಬೈಯಿಂದೆ ಹೇಳುದು ಮಾಷ್ಟ್ರಂಗೆ ಗೊಂತಾಯಿದಿಲ್ಲೆಯಾ?!" ಹೇಳಿ ಕಾಳಜಿಲಿ ಕೇಳಿದೆ. "ಇಲ್ಲೆಮ್ಮಾ...ಅವ್ವು ಎನ್ನ ಸೋಶಿಯಲ್ ಸ್ಟಡೀಸ್ ಸಬ್ಜೆಕ್ಟಿಂಗಿಪ್ಪವ್ವು...ಅಮ್ಮಂಗೆ ಅರ್ಜೆಂಟು ಫೋನು ಮಾಡ್ಲಿಕ್ಕುಂಟು ಸರ್" ಹೇಳಿಯಪ್ಪಗಲೇ ಮೊಬೈಲು ಕೊಟ್ಟವಮ್ಮಾ, ಬೇಗ ತಂದು ಕೊಡಮ್ಮಾ" ಹೇಳಿ ಹೇಳಿ ಫೋನ್ ಮಡುಗಿತು. ಇವರತ್ತರೆ ಮಗಳ ಫೋನ್ ಶುದ್ಧಿ ಹೇಳಿದೆ. ಅದಕ್ಕಿವು, "ನೀನೆಂತ ಈಗ ಹೋಗಿ ಕೊಟ್ಟು ಬರೇಕು ಹೇಳಿ ಇಲ್ಲೆ..ಎಂತರ ಅಷ್ಟು ಮರತು ಹೋಪದು ಅದು? ಒಂದರಿ ಟೀಚರ್ ಕೈಯಿಂದ ಬಯ್ಸಿಕೊಳ್ಳಲಿ, ಅಂಬಗ ಬುದ್ಧಿ ಬತ್ತು...ಇನ್ನೊಂದರಿ ಮರತು ಹೋಗ ಮತ್ತೆ.." ಹೇಳಿದವಿವು. ಆದರೆ ಎನ್ನ ಮನಸ್ಸು ತಡದ್ದಿಲ್ಲೆ. "ಬೇಡ ಪಾಪ ಒಂದರಿ ಮರ‍್ತದಲ್ಲದಾ ಅದು? ಅಂಬಗಂಬಗ ಮರತು ಹೋಪ ಕೂಸಾದ್ರೆ ನಿಂಗೊ ಹೇಳುದು ಸರಿ. ಪಾಪ ಅವಕ್ಕೆ ಬೇರೆ ಇಂಟರ‍್ನಲ್ ಎಸೆಸ್‍ಮೆಂಟ್ ಮಾರ್ಕು ಹೇಳಿ ಇದ್ದು. ಪುಸ್ತಕ ತಾರದ್ದರನ್ನೇ ನೆವ ಮಡಿಕ್ಕೊಂಡು ಟೀಚರ್ ಇದಕ್ಕೆ ಕಡಮ್ಮೆ ಮಾರ್ಕು ಕೊಡುಗು ಮತ್ತೆ..! ಶಾಲೆ ಹೆಚ್ಚು ದೂರ ಇಲ್ಲೆನ್ನೇ..ನಾಲ್ಕೇ ನಾಲ್ಕು ಕಿಲೋಮೀಟರ್. ನಿಂಗಳದ್ದು ಪೂರಾ ಹೆರಟಾಯಿದಿಲ್ಲೆನ್ನೇ..ನಿಂಗೊ ಹೆರಟು ರೆಡಿ ಆಗಿ..ಮಗಳಿಂಗೆ ಬೇಗ ಬೇಕಡ ಪುಸ್ತಕಂಗೊ..ಇದಾ ಆನೀಗ ಹಾಕಿಕೊಂಡಿಪ್ಪ ಚೂಡೀದಾರೇ ಸಾಕು, ಈಗಷ್ಟೇ ಮಿಂದು ಬದಲಿಸಿದ್ದು... ಲಾಯ್ಕಿದ್ದು... ಸ್ಕೂಟರಿಲಿ ಹೀಂಗೆ ಹೋಗಿ ಹಾಂಗೆ ಬಂದು ಬಿಡ್ತೆ...ಹತ್ತು ನಿಮಿಷಲ್ಲಿ ಬಂದು ನಿಂಗೊಗೆ ಆಫೀಸಿಂಗೆ ಹೋಪಲೆ ಸ್ಕೂಟರ್ ಕೊಡ್ತೆ... ಹಾಂಗೂ ತಡವಾದರೆ ಕಾರ್ ಇದ್ದನ್ನೇ..ನಿಂಗೊ ಅದರಲ್ಲಿ ಹೋಗಿ" ಹೇಳಿಯೊಂಡು ಆನು ಮಗಳ ಎರಡು ಪುಸ್ತಕಂಗಳ ಪ್ಲಾಸ್ಟಿಕ್ ಚೀಲಲ್ಲಿ ಹಾಕಿ ಸ್ಕೂಟರಿಲಿ ರೊಂಯನೆ ಹೋಗಿ ಕೊಟ್ಟಿಕ್ಕಿ ಬಂದೆ...ಇವ್ವು ಹೆರಟು ಸ್ಕೂಟರಿಂಗೆ ಕಾದೊಂಡಿತ್ತವು. ಆನು ಬಂದ ಕೂಡ್ಲೇ ಹೇಳಿದವಿವ್ವು, "ಮಗಳಿಂಗಿದಾ ಸ್ಟ್ರಿಕ್ಟ್‍ಲಿ ಹೇಳೇಕು ಇನ್ನು ಮುಂದೆ ಮರವಲಾಗ ಹೇಳಿ. ಇಲ್ಲಿ ದಿನಾ ತೆಕ್ಕಂಡು ಹೊಗಿ ಕೊಡ್ಲೆಡಿತ್ತೆಲ್ಲೆ, ಅದೇ ಕೆಲಸ ಅಲ್ಲ ಹೇಳಿ" ! "ಆತಪ್ಪಾ ಅದು ಹಾಂಗೆಲ್ಲ ಮರೆತ್ತಿಲ್ಲೆ..ಇಂದು ಒಂದು ದಿನ ಹಾಂಗಾತು ಹೇಳಿರೆ ಯೇವಾಗಲೂ ಹಾಂಗಾಯೆಕ್ಕು ಹೇಳಿ ಇದ್ದಾ...?! ಪಾಪ ಅದು..!" ಹೇಳಿ ಮಗಳ ಸಮರ್ಥಿಸಿಕೊಂಡಿದ್ದಾಂಗೆ, ಹೇಳಿದ್ದರ ಪೂರ ಕೇಳ್ಸಿಕೊಳ್ಳದ್ದೇ ನಸು ಕೋಪಲ್ಲಿ ಇವು ಸ್ಕೂಟರಿಲಿ ಹೋಗಿಯೂ ಆತು!
ಇವ್ವು ಆಫೀಸಿಂಗೆ ಹೋಗಿ ಹತ್ತೇ ನಿಮಿಷ, ಇವರ ಕಾಲ್! ಎಂಗೊ ಕಾಲ್ ಮಾಡಿ ಮಾತಾಡುದೇ ಪರಸ್ಪರ ಎಂತಾರು ಉಪಕಾರ ಬೇಕಪ್ಪಗ ಅಥವಾ ಎಂತಾರು ಅರ್ಜೆಂಟ್ ಇದ್ದರೆ ಮಾಂತ್ರ! ಎಂತಕಾದಿಕಪ್ಪಾ ಹೇಳಿ ಎರಡು ರಿಂಗಪ್ಪಗಲೇ ತೆಗದು, "ಹಲೋ ಎಂತ?" ಹೇಳಿ ಕೇಳಿದೆ. "ಅದೂ ಬ್ಯಾಂಗಿಂಗೆ ಕನ್ನಡ್ಕ ಹಾಕಿಯೊಂಡು ಬಪ್ಪಲೆ ಬಿಟ್ಟು ಹೋತು...ಎನ್ನ ಟೇಬಲ್ ಮೇಲೇ ಇದ್ದು..." ಹೇಳಿ ನಿಲ್ಲಿಸಿದವು. "ಅದಕ್ಕೆ ಎಂತ ಮಾಡೇಕು ಆನೀಗ? ತಂದು ಕೊಡೇಕ್ಕಾ ಅಲ್ಲಾ ನಿಂಗೊ ಮನೆಗೆ ಬಂದು ತೆಕ್ಕಂಡು ಹೋವುತ್ತೀರಾ?" ಕೇಳಿದೆ. "ಮನಗೆ ಬತ್ತರೆ ನಿನಗೆ ಕಾಲ್ ಮಾಡ್ತಿತ್ತೆನಾ?! ಇಲ್ಲಿಗೆ ಬಂದು ಎತ್ತಿದ ಕೂಡ್ಲೇ ಹೇಂಗೆ ಹೆರಟು ಮನಗೆ ಬಪ್ಪದು?! ನಿನಗೆ ತಂದು ಕೊಡ್ಲೆಡಿಗಾ?" ಕೇಳಿದವಿವು. "ಅರ್ಜೆಂಟಿದ್ದಾ ಕನ್ನಡ್ಕ? ಬಸ್ಸಿಲಿ ಬರೇಕಾ ಅಲ್ಲ ಕಾರಿಲಿ ಬರೇಕಾ ಕನ್ನಡ್ಕ ತೆಕ್ಕಂಡು?" ಹೇಳಿ ಕೇಳಿದೆ. ನಿನಗೆ ಹೇಂಗೆ ಬೇಕೋ ಹಾಂಗೆ ತೆಕ್ಕಂಡು ಬಾ...ಒಟ್ಟು ಎನಗೆ ಅರ್ಧ ಗಂಟೆಲಿ ಕನ್ನಡ್ಕ ಸಿಕ್ಕಿರೆ ಆತು" ಹೇಳಿ ಫೋನು ಮಡುಗಿದವು! ಕುಶಿಲಿ ಕೊಣುದು ಕುಪ್ಪಳಿಸುವ ಹಾಂಗಾತೆನಗೆ! ಸಿಕ್ಕಿದ್ದೇ ಛಾನ್ಸ್, ಈ ಸಂದರ್ಭವ ಸದುಪಯೋಗ ಪಡಿಸಿಕೊಳ್ಳೇಕು ಹೇಳಿ ಗ್ರೇಶಿಯೊಂಡು ಬೇಗ ಬೇಗ ಡ್ರೆಸ್ ಬದಲಿಸಿ ಕಾರಿಲಿ ಬಂದು ಕೂದು ಸ್ಟಾರ‍್ಟ್ ಮಾಡಿ, ಎ.ಸಿ. ಆನ್ ಮಾಡಿ, ಪೆನ್ ಡ್ರೈವಿಲಿಪ್ಪ ಹಳೇ ಕನ್ನಡ ಹಾಡುಗಳ ಹಾಕಿಯೋಂಡು ದೊಡ್ಡದಾಗಿ ವಾಲ್ಯುಮ್ ಕೊಟ್ಟು ನಿಧಾನಕ್ಕೆ ಬೇಕಪ್ಪಗ ನಿಧಾನ, ಸ್ಫೀಡ್ ಬೇಕಪ್ಪಗ ಸ್ಫೀಡಿಲಿ ಹೋಗಿ ಇವರ ಆಫೀಸಿಂಗೆತ್ತಿ ಇವರ ಕನ್ನಡ್ಕವ ಹಸ್ತಾಂತರಿಸಿದೆ. ವಾಪಸ್ಸು ಬಪ್ಪಾಗ ರಜ್ಜ ಲಾಂಗ್ ರೂಟ್ ಆಗಿಯೇ ಮನಗೆ ಬಂದೆ! ಒಂದರಿ ಒಬ್ಬನೇ ಡ್ರೈವ್ ಮಾಡಿಯೊಂಡು, ಎ.ಸಿ ಹಾಕಿಯೊಂಡು, ಎನಗಿಷ್ಟ ಇಪ್ಪ ಹಳೇ ಕನ್ನಡ ಚಿತ್ರಗೀತೆಗಳ ಪ್ಲೇ ಮಾಡಿಯೊಂಡು, ಅದರ ಮಾಧುರ್ಯವ ಅನುಭವಿಸುತ್ತಾ ಲಾಂಗ್ ಡ್ರೈವ್‍ನ ಮಜ ಅನುಭವಿಸೇಕು ಹೇಳಿ ಎಷ್ಟೋ ವರ್ಷಂದ ಆಸೆ ಇದ್ದತ್ತು! ಇಲ್ಲದ್ದರೆ ಕಾರಿಲಿ ಎಂಗೊಲ್ಲಾ ಸಂಸಾರ ಸಮೇತ ಒಟ್ಟಾಗಿ ಎಲ್ಲಿಗಾದ್ರೂ ಹೋಪಗ ಮಕ್ಕೊಗೆ ಹಿಂದಿ ಹಾಡುಗೊ ಬೇಕಾದರೆ, ಎನಗೆ ಹಳೇ ಕನ್ನಡ ಚಿತ್ರಗೀತೆಗೊ, ಇವಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಅಥವಾ ಭಕ್ತಿಗೀತೆ, ಒಬ್ಬಂಗೆ ಎ.ಸಿ ಬೇಕಾದರೆ, ಇನ್ನೊಂಬ್ಬಂಗೆ ಬೇಡ...ಅಕೇರಿಗೆ ಎಲ್ಲೋರಿಂಗೂ ಲಡಾಯಿಯಾಗಿ ಎನಗೆಂತ ಬೇಕೋ ಅದು ಸಿಕ್ಕಿಕೊಂಡಿತ್ತಿಲ್ಲೆ! ಹಾಂಗೆ ಏಕಾಂಗಿಯಾಗಿ ಕಾರಿಲಿ ಲಾಂಗ್ ಡ್ರೈವಿನ ಕೊದಿ ಹಿಡುದಾಯಿಕ್ಕು ಎನಗೆ! ಇರಾಲಿ ಅದೆಂತದೇ ಇರಲಿ ಅಂತೂ ಒಂದು ಗಂಟೆ ಏಕಾಂಗಿಯಾಗಿ ಕಾರಿಲಿ ಎನಗೆ ಬೇಕಾದಂಗೆ ಎಲ್ಲ ಸೆಟ್ ಮಾಡಿಯೊಂಡು, ಅನುಭವಿಸಿ ಮನೆಗೆ ಎತ್ತಿದೆ! 
ಮಗಳು ಶಾಲೆಂದ ಎತ್ತಿಯಪ್ಪದ್ದೇ ಹೇಳಿದೆ, " ಮಗಾ ನಿನ್ನ ಛಾನ್ಸ್ ಇಂದು, ಅಪ್ಪ ನೀನು ಪುಸ್ತಕ ಮರತು ಹೋದಕ್ಕೆ ಎಂತ ಹೇಳವು...ಎಂತಕೆ ಗೊಂತಿದ್ದಾ? ಅಪ್ಪ ಇಂದು ಆಫೀಸಿಂಗೆ ಹೋಪಗ ಕನ್ನಡ್ಕ ಮರದು ಹೋಗಿತ್ತವು! ಮತ್ತೆ ಆನು ಕಾರಿಲಿ ಹೋಗಿ ಕೊಟ್ಟು ಬಂದದು... ನಿನಗೆ ಸ್ಕೂಟರಿಲಿ, ಅಪ್ಪಂಗೆ ಕಾರಿಲಿ" ಹೇಳಿ ಚಪ್ಪಾಳೆ ತಟ್ಟಿ ಮಕ್ಕಳ ಹಾಂಗೆ ನೆಗೆ ಮಾಡಿದೆ. ಮಗಳು ಆಶ್ಚರ್ಯಲ್ಲಿ ಕೇಳಿತು, "ಅಪ್ಪ ಕನ್ನಡ್ಕ ಮರತು ಹೋಗಿತ್ತವಾ? ಒಂದು ದಿನ ಆದರೂ ಹಾಂಗೆ ಮರತು ಹೋದ್ದೇ ಇಲ್ಲೆನ್ನೆಮ್ಮಾ ಹೇಳಿ!" "ಅದೆಂತದೇ ಇರಾಲಿ ಮಗಾ ನಿನಗಂತೂ ಇಂದು ಬೈಗುಳ ಇಲ್ಲೆ ಹೇಳಿದೆ"

ಕಸ್ತಲಪ್ಪಗ ಇವು ಬಂದವು...ಮಗಳ ಹತ್ತರ ಇವ್ವು, ಇವರತ್ತರೆ ಮಗಳು ಇಬ್ಬರೂ ಪರಸ್ಪರ ಪುಸ್ತಕ, ಕನ್ನಡ್ಕದ ವಿಚಾರ ಮಾತಾಡಿಕೊಂಡಿದವಿಲ್ಲೆ! ಇರುಳು ಉಂಡೆಲ್ಲಾ ಆದ ಮತ್ತೆ ದಿನ ಇಡೀ ನಡದ್ದರ ಮೆಲುಕು ಹಾಕಿದೆ.. ಎಲ್ಲಾ ದಿನಪತ್ರಿಕೆಗಳ ದಿನಭವಿಷ್ಯ ಎನ್ನ ಅಣುಕಿಸಿದ ಹಾಂಗಾತು...! ಆಲೋಚನೆ ಮಾಡಿ ನೋಡಿಯಪ್ಪಗ ಎಲ್ಲಾ ದಿನಪತ್ರಿಕೆಗಳಲ್ಲಿ ಮುದ್ರಿತವಾದ ಎಂಗಳಿಬ್ಬರ ದಿನಭವಿಷ್ಯಂಗೊ ನಿಜವಾಗಿತ್ತು!!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು.